ಸಿನಿಮಾ ಪೋಸ್ಟರ್ ಗಳಲ್ಲಿ ಈಗ ಕರಣ್ ಕೈ ಚಳಕದ ಕಾಲ
ನಾಲ್ಕು ವರ್ಷಗಳ ಹಿಂದೆ ರಚಿಸಿದ ಚಿತ್ರವೊಂದು ಇಂದು ಕರಣ್ ಆಚಾರ್ಯರನ್ನು ದೇಶದ ಜನಪ್ರಿಯ ಚಿತ್ರ ಕಲಾವಿದರನ್ನಾಗಿ ಮಾಡಿದೆ. ಅದಕ್ಕೆ ಕಾರಣ ಅವರು ಹನುಮಂತನ ಚಿತ್ರಕ್ಕೆ ನೀಡಿರುವ ಹೊಸ ಭಾವ. ಇದೀಗ ಅದೇ ಚಾಪನ್ನು ಕನ್ನಡ ಚಿತ್ರರಂಗದಲ್ಲಿಯೂ ಮೂಡಿಸುತ್ತಾ ಹೆಸರಾಗುತ್ತಿದ್ದಾರೆ ಕರಣ್.
ಗಡಿನಾಡು ಕಾಸರಗೋಡಿನ ಹೃದಯಭಾಗದಲ್ಲಿ ಇರುವುದೇ ಕೂಡ್ಲು. ಅಲ್ಲಿ ದಯಾನಂದ ಆಚಾರ್ಯ ಮತ್ತು ಮಂಜುಳಾ ದಂಪತಿಯ ಮೂವರು ಮಕ್ಕಳಲ್ಲಿ ಹಿರಿಯ ಮತ್ತು ಏಕೈಕ ಪುತ್ರನಾಗಿ ಜನಿಸಿದವರು ಕಿರಣ್ ಆಚಾರ್ಯ. 'ಆದರೆ ಸ್ನೇಹಿತರ ಬಾಯಲ್ಲಿ ಕರಣ ಎಂದೆ ಗುರುತಿಸಿಕೊಂಡ ಅವರು ಇಂದು ಕರಣ್ ಆಚಾರ್ಯ ರಾಗಿಯೇ ಜನಪ್ರಿಯ. ಬಡಗಿಯಾಗಿದ್ದ ತಂದೆ ಮರದಲ್ಲಿ ಕಲೆಯನ್ನು ವಿನ್ಯಾಸಗೊಳಿಸುವಲ್ಲಿ ನಿಪುಣರಾಗಿದ್ದರೆ ತಾಯಿ ಮಂಜುಳಾ ಕೂಡ ಆನೆ, ಗಣೇಶ ಮೊದಲಾದ ಸ್ಕೆಚಸ್ ಗಳನ್ನು ಹಾಕಿ ಮಗನಲ್ಲಿ ಕಲಾಶಕ್ತಿ ಬೆಳೆಸುವಲ್ಲಿ ನಿಪುಣರಾಗಿದ್ದರು.

ಕಲಾ ಜ್ಞಾನ ದಾಹ
ದ್ವಿತೀಯ ಪಿಯುಸಿ ಬಳಿಕ ಲಲಿತ ಕಲಾ ಕ್ಷೇತ್ರ ಸೇರಲು ಬಯಸಿದ ಕರಣ್ `ರಿದಮ್ ಸ್ಕೂಲ್ ಆಫ್ ಫೈನ್ಆರ್ಟ್ಸ್’ ಸೇರಿಕೊಂಡರು. ಅಲ್ಲಿ ಕಲಾಶಿಕ್ಷಕರಾಗಿದ್ದ ಕಣ್ಣೂರಿನ ಗಿರೀಶರಿಂದ ಪ್ರೋತ್ಸಾಹ ಪಡೆದರು. ಸ್ಥಳೀಯ ಶಾಲಾ ಮಕ್ಕಳಿಗೆ ಡ್ರಾಯಿಂಗ್ ಹೇಳಿ ಕೊಡುತ್ತಾ ಆ ದುಡ್ಡಿನಲ್ಲಿ ಕ್ಯಾಡ್ ಸಿಟಿಯಲ್ಲಿ ಫೋಟೋಶಾಪ್ ಕಲಿಯಲಾರಂಭಿ ಸಿದರು, ಆದರೆ ಅಲ್ಲಿನ ಫೀಸು ಅಧಿಕವಾಯಿತೆಂದೆನಿಸಿದಾಗ ಕಲಿಕೆಯನ್ನು ಅರ್ಧಕ್ಕೆ ನಿಲ್ಲಿಸಿದರು. ಇವರ ಪ್ರತಿಭೆಯನ್ನು ಕಂಡ ಸಂಸ್ಥೆಯ ಮಂದಿಯೇ ಖುದ್ದಾಗಿ ಕೇರಳದ ತ್ರಿಚೂರ್ಗೆ ಇವರನ್ನು ಟ್ರೈನಿಂಗ್ಗೆಂದು ಕಳಿಸಿದರು! ಬಳಿಕ ತಮ್ಮ ಸಂಸ್ಥೆಯಲ್ಲಿ ಶಿಕ್ಷಕರಾಗಿ ನೇಮಕಗೊಳಿಸಿದರು. ಸೈನ್ ಲ್ಯಾಂಗ್ವೇಜ್ ಅರಿತಿರುವ ಕಾರಣ ಆ ಶಾಲೆಯಲ್ಲಿ ಮಾತು ಬಾರದ ಮೂರು ಮಂದಿ ಮಕ್ಕಳನ್ನು ಸೇರಿಸಿ ಶಿಕ್ಷಣ ನೀಡಿದರು.
ಆಸಕ್ತಿಯೇ ನೀಡಿತು ಆರ್ಥಿಕ ಶಕ್ತಿ
ಆರ್ಥಿಕ ಶಕ್ತಿಯಿಲ್ಲದೆ ಹೋದಾಗ ಆಸಕ್ತಿಗಳನ್ನು ಬದಿಗಿಟ್ಟು ಹಣ ಮಾಡುವ ವೃತ್ತಿಗೆ ವಿಧೇಯರಾಗಬೇಕಾಗುತ್ತದೆ. ಅದೇ ಕಾರಣದಿಂದಲೇ ಕರಣ್ ಆಚಾರ್ಯ ಶಿಕ್ಷಕ ವೃತ್ತಿ ತೊರೆದು ಬಿಲ್ಲರ್ಸ್ ಸಂಸ್ಥೆಯಲ್ಲಿ ಡಿಸೈನರಾಗಿ ಸೇರಿಕೊಳ್ಳುತ್ತಾರೆ. ಒಬ್ಬ ಕಲಾವಿದನಾಗಿ ಚಿತ್ರಕಲಾ ಪ್ರದರ್ಶನ ಗಳನ್ನು ನಡೆಸುತ್ತಾ ಜನಪ್ರಿಯ ನಾಗಬೇಕೆಂಬ ಅವರ ಕನಸು ನನಸಾಗಲೇ ಇಲ್ಲ. ಬೆಂಗಳೂರಿನಲ್ಲಿ ಕಲೆ ಗೆ ಹೆಚ್ಚು ಅವಕಾಶವಿದೆ ಎಂದು ಹಿಂದೊಮ್ಮೆ ಬಂದಿದ್ದಾಗ ಸರಿಯಾದ ವೃತ್ತಿಪರ ತರಬೇತಿ ಪಡೆದಿಲ್ಲ ಎಂಬ ಕಾರಣದಿಂದಾಗಿ ಒಳ್ಳೆಯ ಕೆಲಸ ದೊರಕದೇ ಹೋಯಿತು. ಬಳಿಕ ಮಂಗಳೂರಿನ ಇನ್ಫೋಟೆಕ್ನಲ್ಲಿ ಇ ಲರ್ನಿಂಗ್ ಇಲೆಕ್ಚರಿಂಗ್ ವಿಭಾಗದಲ್ಲಿ ಕಾರ್ಯನಿರ್ವಹಿಸಿದರು. ಇದರ ನಡುವೆಯೇ ಅನಿಮೇಟೆಡ್ ಸೇರಿದಂತೆ ತಮ್ಮ ರಚನೆಗಳನ್ನು ಫೇಸ್ಬುಕ್ನಲ್ಲಿಯೂ ಅಪ್ಲೋಡ್ ಮಾಡುವ ಮೂಲಕ ಅವಕಾಶಗಳು ಸಿಗಬಹುದೇ ಎಂದು ಕಾಯುತ್ತಿದ್ದರು ಕರಣ್.
ಹನುಮ ಕಣ್ಣು ತೆರೆದಾಗ
ಘಟನೆ ನಡೆದ ಈ ತಿಂಗಳಿಗೆ ಸರಿಯಾಗಿ ನಾಲ್ಕು ವರ್ಷವಾಯಿತು..’’ ಎಂದು ನೆನಪಿಸಿಕೊಳ್ಳುವ ಕರಣ್ ಆ ವಿಚಾರವನ್ನು ಹೀಗೆ ತೆರೆದಿಡುತ್ತಾರೆ. ಕುಂಬೈಯಲ್ಲಿ ಆರ್ಯನ್ಸ್ ಎಂಬ ಸಮಾಜ ಸೇವಾ ಸಂಘವಿದೆ. ಅವರು ತಮ್ಮ ವಾರ್ಷಿಕೋತ್ಸವದಲ್ಲಿ ಬಳಸಲು ಒಂದು ವಿಭಿನ್ನ ಧ್ವಜಕ್ಕಾಗಿ ಬೇಡಿಕೆಯಿಟ್ಟಿದ್ದರು. ಆದರೆ ಬಿಡುವು ಸಿಗದ ಕಾರಣ ಧ್ವಜ ಪ್ರಿಂಟ್ ಗೆ ಹೋಗುವ ಹಿಂದಿನ ದಿನದ ತನಕ ಯಾವುದೇ ತಯಾರಿಯೂ ನನ್ನಿಂದ ಆಗಿರಲಿಲ್ಲ,ಚಿತ್ರದಲ್ಲಿ ಶಿವ ಅಥವಾ ನರಸಿಂಹನ ಉಗ್ರರೂಪ ಬೇಕೆಂಬುದು ಅವರ ಆಗ್ರಹ ವಾಗಿತ್ತು. ಆದರೆ ಹನುಮಂತನ ಚಿತ್ರ ಬಿಡಿಸುವುದಾಗಿ ಹೇಳಿದಾಗ ಅವರು ಆತನ ಮುಖದಲ್ಲಿಯೂ ಉಗ್ರಭಾವ ಕಾಣಿಸಬೇಕೆಂದು ಹೇಳಿದ್ದರು. ಧ್ವಜ ಗಳಲ್ಲಿ ಶಿವಾಜಿ ನಕ್ಷೆಯೊಂದನ್ನು ಕಂಡ ನೆನಪಿರುವುದು ಬಿಟ್ಟರೆ ನನಗೆ ಯಾವುದೇ ಸ್ಫೂರ್ತಿಗಳಿರಲಿಲ್ಲ. ಆದರೆ ಕಣ್ಣುಗಳಲ್ಲೇ ಸಂಚಲನ ಸೃಷ್ಟಿಸುವಂಥ ಹನುಮಂತನ ಚಿತ್ರವನ್ನು ರಚಿಸಿದೆ. ಅದಕ್ಕೆ ಮರುದಿನ ದೇಹ ರೂಪ ನೀಡುವ ವೇಳೆಗೆ ಧ್ವಜ ಸೇರಿದ್ದ ಮುಖ ಜನಮನ ಸಾಯಲು ಶುರು ಮಾಡಿತು. ಹಾಗೇ ಇಂದು ಚಿತ್ರವು ರಾಜ್ಯದ ಗಡಿ ದಾಟಿ ದೊಡ್ಡಮಟ್ಟದ ಎಲ್ಲೆಲ್ಲಿಯೂ ಗುರುತಿಸಿಕೊಳ್ಳುತ್ತಿದೆ. ಈ ಜನಪ್ರಿಯತೆಯನ್ನು ಕಾಣಲು ಎಂಟು ವರ್ಷದ ಹಿಂದೆ ಅಗಲಿದ ತನ್ನ ತಂದೆಗೆ ಸಾಧ್ಯವಾಗಲಿಲ್ಲವಲ್ಲಾ ಎನ್ನುವ ನೋವು ಕರಣ್ ರಲ್ಲಿದೆ. ಮಾತ್ರವಲ್ಲ ಮಾಧ್ಯಮಗಳು ಗುರುತಿಸಿತು ಎಂಬುವುದನ್ನು ಬಿಟ್ಟರೆ ಚಿತ್ರರೂಪಕ್ಕೆ ಯಾವುದೇ ಕಾಪಿ ರೈಟ್ಸ್ ಗಳಿಲ್ಲದ ಕಾರಣ ಆರಂಭದಲ್ಲಿ ಕರಣ್ ಗೆ ಇದರಿಂದ ಆರ್ಥಿಕ ಲಾಭಗಳೇನೂ ಆಗಿಲಿಲ್ಲ. ಆದರೆ ಈಗ ಕರಣ್ ತಮ್ಮ ಚಿತ್ರಗಳ ಕಾಪಿರೈಟ್ಸ್ ತಮ್ಮಲ್ಲೇ ಇರಿಸಿಕೊಂಡಿದ್ದಾರೆ.
ಸಿನಿಮಾ ಪೋಸ್ಟರ್ ಗಳವರೆಗೆ ಕರಣ್ ಆಚಾರ್ಯ ಬಿಡಿಸಿದ ಚಿತ್ರ ಬೆಂಗಳೂರು ಸೇರಿದಂತೆ ಮಹಾನಗರಗಳ ವಾಹನಗಳಲ್ಲಿ ಸ್ಟಿಕ್ಕರಾಗಿವೆ! ಅವುಗಳಿಗೆ ಕಾರು, ಲಾರಿಯೆನ್ನುವ ಬೇಧವಿಲ್ಲ. ಇತ್ತೀಚೆಗೆ ಟೀಶರ್ಟ್ ಸಂಸ್ಥೆಯೊಂದು ಅನ್ನು ಬಳಸಿಕೊಳ್ಳುವ ಬಗ್ಗೆ ಮಾತನಾಡಿದೆಯಂತೆ. `ಗಂಧದ ಕುಡಿ’ ಎಂಬ ಚಿತ್ರವೊಂದರ ಸೋರಿ ಬೋರ್ಡ್ಗೆ ಕಲಾವಿದರಾಗಿ ಕೆಲಸ ಮಾಡಿದ್ದಾರೆ. ಕೊನೆಗೂ ಸಿನಿಮಾಗಳಿಗೆ ಕೆಲಸ ಮಾಡಬೇಕಾದರೆ ಬೆಂಗಳೂರಿನಲ್ಲೇ ಇರಬೇಕು ಎನ್ನುವ ತೀರ್ಮಾನಕ್ಕೆ ಬಂದಿರುವ ಕರಣ್ ಇದೀಗ ಬೆಂಗಳೂರಲ್ಲೇ ನೆಲೆಸಿದ್ದಾರೆ. ಕಲಾವಿದೆಯನ್ನೇ ವರಿಸುವ ಮೂಲಕ ಕರಣ್ ಎರಡು ವರ್ಷಗಳ ಹಿಂದೆ ವೈವಾಹಿಕ ಜೀವನಕ್ಕೆ ಪ್ರವೇಶಿಸಿದ್ದು ಪ್ರಸ್ತುತ `ಪರಿಧಿ ಮೀಡಿಯಾ ವರ್ಕ್ಸ್’ ಮೂಲಕ ಕಲಾ ವಿಭಾಗದ ಕೆಲಸಗಳಲ್ಲಿ ನಿರತರಾಗಿದ್ದಾರೆ. ಪತ್ನಿ ಪೂಜಾ ಸಂಸ್ಥೆಯ ಪಾಲುದಾರಿಕೆಯೊಂದಿಗೆ ಮ್ಯಾನೇಜಿಂಗ್ ಪಾರ್ಟ್ನರ್ ಆಗಿದ್ಧಾರೆ.
ಈ ಅಲ್ಪಾವಧಿಯಲ್ಲೇ ಕನ್ನಡದ ಪ್ರಮುಖ ತಾರೆಯರ ಚಿತ್ರಗಳ ಪೋಸ್ಟರ್ ಡಿಸೈನ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ ಕರಣ್. ಈಗಾಗಲೇ ಸುದ್ದಿಯಲ್ಲಿರುವ `ಮುಂದಿನ ನಿಲ್ದಾಣ’ ಚಿತ್ರದ ಪೋಸ್ಟರ್ ಸೇರಿದಂತೆ ಏಳು ಭಾಷೆಯಲ್ಲಿ ತೆರೆಕಂಡಿರುವ ರಿಯಲ್ ಸ್ಟಾರ್ ಉಪೇಂದ್ರರ `ಕಬ್ಜ’ ಚಿತ್ರದ ಪೋಸ್ಟರ್ ಕೂಡ ಇವರೇ ಡಿಸೈನ್ ಮಾಡಿದ್ದಾರೆ ಎನ್ನುವುದು ಈಗಲೂ ಬಹಳ ಮಂದಿಗೆ ಗೊತ್ತಿಲ್ಲ. ಎಲ್ಲವೂ ಅಂದುಕೊಂಡಂತೆ ಆದರೆ ಮಹಾಭಾರತವನ್ನು ಅನಿಮೇಟೆಡ್ ಧಾರಾವಾಹಿ ಮಾಡುವ ಕನಸು ಕರಣ್ ರಲ್ಲಿದೆ. ಇಂಥ ಕನಸುಗಾರ ಕರಣ್ ಮತ್ತು ಪತ್ನಿ ನಮ್ಮ `ಪಾಸಿಟಿವ್ ಪಿಕ್ಚರ್’ ಗೆ ಕೆಲಸ ಮಾಡಿರುವುದು ಶೀರ್ಷಿಕೆ ಸೇರಿದಂತೆ ಆರ್ಟ್ ಡಿಸೈನ್ ಗಳನ್ನು ಮಾಡಿಕೊಟ್ಟಿರುವುದನ್ನು ನಾವು ಹೆಮ್ಮೆಯಿಂದ ಸ್ಮರಿಸಿಕೊಳ್ಳುತ್ತೇವೆ.





